🔥 Follow our WhatsApp Channel! ×
WhatsApp
Loading Now

ಸುಧೀಂದ್ರ ತೀರ್ಥರ ಅನುಗ್ರಹದಿಂದ ಸಮಾಜದಲ್ಲಿ ಐಕ್ಯತೆ

ಸುಧೀಂದ್ರ ತೀರ್ಥರ ಅನುಗ್ರಹದಿಂದ ಸಮಾಜದಲ್ಲಿ ಐಕ್ಯತೆ – ಸಂಯಮೀಂದ್ರ ತೀರ್ಥ ಸ್ವಾಮೀಜಿ ಜನ್ಮಶತಾಬ್ದಿಯ ಮಂಗಳೋತ್ಸವ ಪ್ರಯುಕ್ತ ನಡೆದ ವ್ಯಾಸಧ್ವಜ ಸಂಕೀರ್ತನಾ ಪಾದಯಾತ್ರೆ ಪಾದುಕಾ ದಿಗ್ವಿಜಯಯಾತ್ರೆಯಲ್ಲಿ ಆರ್ಶೀವಚನ

ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಸಮಾಜದಲ್ಲಿ ಐಕ್ಯತೆ, ಒಗ್ಗಟ್ಟು ಮೂಡಿ ಸಮಾಜ ಅಭಿವೃದ್ಧಿಯಾಗಬೇಕೆಂದು ಅನುಗ್ರಹಿಸಿದ ಕಾರಣ ಗೌಡ ಸಾರಸ್ವತ ಸಮಾಜ ಆದರ್ಶಯುತವಾಗಿ ಬೆಳೆದು ನಿಂತಿದೆ. ಸ್ವಾಮೀಜಿಯವರು ಎಲ್ಲರನ್ನು ಪ್ರೀತಿ, ವಿಶ್ವಾಸದಿಂದ ಆರ್ಶೀವಾದ ಮಾಡಿದ ಪರಿಣಾಮ ಸಮಾಜದ ಏಳಿಗೆಯಾಗಿದೆ. ಅದಕ್ಕೆ ಒಂದೂವರೆ ವರ್ಷದಿಂದ ನಿರಂತರವಾಗಿ ನಡೆದುಕೊಂಡು ಬಂದ ಕಾರ್ಯಕ್ರಮಗಳ ಅದ್ದೂರಿತನ ಹಾಗೂ ಮಂಗಳೋತ್ಸವ ವೈಭವವೇ ಸಾಕ್ಷಿ ಎಂದು ಕಾಶೀಮಠಾಧೀಶರಾದ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಹೇಳಿದರು.


ಅವರು ಮಂಗಳೂರು ರಥಬೀದಿ ಶ್ರೀವೆಂಕಟರಮಣದ ಮುಂಭಾಗದಲ್ಲಿ ನಡೆದ ಮಂಗಳೋತ್ಸವದ ಸಮಾರೋಪ ಸಮಾರಂಭದಲ್ಲಿ ನೆರೆದ ಸಹಸ್ರಾರು ಭಕ್ತರಿಗೆ ಆರ್ಶೀವಚನ ನೀಡಿ ಮಾತನಾಡಿದರು. ಶ್ರೀಕಾಶೀಮಠ ಸಂಸ್ಥಾನಕ್ಕೆ ಮಂಗಳೂರು ಹಾಗೂ ಕೊಚ್ಚಿ ಎರಡು ಕಣ್ಣುಗಳಿದ್ದಂತೆ. ಮಂಗಳೂರು ಪೇಟೆ ಸುಧೀಂದ್ರ ತೀರ್ಥ ಸ್ವಾಮೀಜಿಯವರ ವಿಶೇಷವಾದ ಪ್ರೀತಿಯಿಂದ ಏಳಿಗೆ ಕಂಡು ಬಂದಿದೆ. ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ದೇವರ ಪುನರ್ ಪ್ರತಿಷ್ಠೆ ಶ್ರೀಗಳಿಂದಲೇ ಅದ್ದೂರಿಯಾಗಿ ನಡೆದಿತ್ತು. ಅದರಂತೆ ಸಂಸ್ಥಾನದ ದೇವರನ್ನು ಸಿಂಹಾಸನದಲ್ಲಿ ಕೂರಿಸಿ ಮಂಗಳೂರಿನಲ್ಲಿ ನಡೆದ ವೈಭವದ ಕಾರ್ಯಕ್ರಮ ಅವಿಸ್ಮರಣೀಯವಾದದ್ದು. ಕಳೆದ ಒಂದೂವರೆ ವರ್ಷದಿಂದ ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಕಾರ್ಯಕ್ರಮಗಳು ನಡೆದಿವೆ. ಫಲೋದ್ಯಾನದ ಸಂಕಲ್ಪದಿಂದ ಹಿಡಿದು ಮನೆಮನೆ ಭಜನೆಯ ತನಕ, ಏಕವೇದಿಕೆಯಲ್ಲಿ ಶತಕಂಠಗಾಯನ, ಶತನೃತ್ಯನಮನ, ಶತವಾದ್ಯನಮನ, ಶತಬಾಲಗಾಯನ ಹೀಗೆ ನಡೆದ ಕಾರ್ಯಕ್ರಮಗಳು ಸಮಾಜದ ಸಂಘಟಿತ ಪರಿಶ್ರಮದಿಂದ ಸಾಧ್ಯವಾಗಿದೆ. ಇದೆಲ್ಲವನ್ನು ಪ್ರೀತಿಯಿಂದ ಮಾಡಿದ ಸಮಾಜದ ನಾಗರಿಕರು ದೇವರ, ಸ್ವಾಮೀಜಿಯವರ ಆರ್ಶೀವಾದಕ್ಕೆ ಪಾತ್ರರಾಗಿದ್ದಾರೆ ಎಂದು ಶ್ರೀಗಳು ಹೇಳಿದರು. ದೇವರಿಗೆ ನಾವು ಕಿಂಚಿತ್ ಸೇವೆ ಸಮರ್ಪಿಸಿದರೆ ದೇವರು ಅದರ ನಾಲ್ಕರಷ್ಟು ಏಳಿಗೆಯನ್ನು ನಮಗೆ ಕರುಣಿಸುತ್ತಾನೆ. ಶ್ರದ್ಧೆ, ಪ್ರೀತಿಯಿಂದ ದೇವರಿಗೆ, ಮಠಕ್ಕೆ ಮಾಡುವ ಸೇವೆಯ ಫಲ ಸಮಾಜಕ್ಕೆ ಸಿಕ್ಕಿದೆ ಎಂದು ಅವರು ಆರ್ಶೀವದಿಸಿದರು.


ರಥಬೀದಿಯಲ್ಲಿ ಕೊಂಚಾಡಿ ದೇವಳದಿಂದ ಆಗಮಿಸಿದ ಸ್ವರ್ಣರಥದಲ್ಲಿ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಸ್ವರ್ಣಪಾದುಕೆ, ಬಸ್ರೂರು ಕಾಶೀಮಠದಿಂದ ತಂದ ಬೆಳ್ಳಿರಥದಲ್ಲಿ ಸ್ವಾಮೀಜಿಯವ ಭಾವಚಿತ್ರ ಇಟ್ಟು ಮೆರವಣಿಗೆ ಮಾಡಲಾಯಿತು. ಸ್ವರ್ಣಲಾಲಕಿಯಲ್ಲಿ ವೆಂಕಟರಮಣ ದೇವರಿಗೆ ಭಕ್ತರು ಆರತಿ ಸಮರ್ಪಿಸಿದರು. ನೃತ್ಯ ಭಜನೆ, ಭಜನಾ ಸಂಕೀರ್ತನೆ, ಮಕ್ಕಳು ದೇವರ, ಮಹಾಪುರುಷರ ಉಡುಗೆತೊಡುಗೆಯೊಂದಿಗೆ ಟ್ಯಾಬ್ಲೋದಲ್ಲಿ ಸಂಚರಿಸಿದರೆ, ವಿವಿಧ ಊರುಗಳಿಂದ ಬಂದ ಸ್ವಾಮೀಜಿಯವರ ಫೋಟೋ ಹೊತ್ತ ವಾಹನಗಳು ಭಜನೆಯೊಂದಿಗೆ ಸಾಗಿದವು. ಕೊಂಚಾಡಿ ಶ್ರೀ ಕಾಶೀಮಠದಿಂದ ಪಾದಯಾತ್ರೆಯಲ್ಲಿ ಆಗಮಿಸಿದ ಊರ, ಪರವೂರ, ವಿವಿಧ ರಾಜ್ಯಗಳ ಸಹಸ್ರಾರು ಭಕ್ತರು ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ತನಕ ಪಾದಯಾತ್ರೆ ನಡೆಸಿದರು. ದಾರಿಯುದ್ದಕ್ಕೂ ನಿರ್ದಿಷ್ಟ ಕಡೆ ಆಹಾರ, ಪಾನೀಯ ವ್ಯವಸ್ಥೆ ಮಾಡಲಾಗಿತ್ತು. ಸ್ವಾಮೀಜಿಯವರು ಕೆನರಾ ಹೈಸ್ಕೂಲಿನಿಂದ ಟ್ಯಾಬ್ಲೋದಲ್ಲಿ ಆಗಮಿಸಿ ರಥಬೀದಿಯಲ್ಲಿ ಭಕ್ತಸಮೂಹದೊಂದಿಗೆ ಹೆಜ್ಜೆ ಹಾಕಿದರು. ಮಂಗಳಾ ಸಭಾ ವೇದಿಕೆಯಲ್ಲಿ ಕಾರ್ಯಕ್ರಮದ ಗೌರವಾಧ್ಯಕ್ಷ ಡಾ.ಪಿ. ದಯಾನಂದ ಪೈ, ಸತೀಶ್ ಪೈ, ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಅಡಿಗೆ ಬಾಲಕೃಷ್ಣ ಶೆಣೈ, ದೇವಳದ ಟ್ರಸ್ಟಿಗಳಾದ ಕಿರಣ್ ಪೈ, ಸತೀಶ್ ಪ್ರಭು, ಗಣೇಶ್ ಕಾಮತ್, ಸಿಎ ಜಗನ್ನಾಥ್ ಕಾಮತ್, ಜಿಎಸ್ ಬಿ ಆಲ್ ಟೆಂಪಲ್ ಅಸೋಸಿಯೇಶನ್ ಅಧ್ಯಕ್ಷ ಅತುಲ್ ಕುಡ್ವ, ಪಂಡಿತ್ ಎಂ ನರಸಿಂಹ ಆಚಾರ್ಯ, ಚೆಂಪಿ ರಾಮಚಂದ್ರ ಭಟ್, ಕೋಟೇಶ್ವರ ದಿನೇಶ್ ಕಾಮತ್, ಗುರುದತ್ ಕಾಮತ್, ಗೋವಿಂದರಾಜ್ ಪೈ, ಆರ್ .ಜಿ. ಭಟ್, ವೇದವ್ಯಾಸ ಕಾಮತ್, ಅಮಿತ್ ಪೈ, ರಘುವೀರ್ ಭಂಡಾರಕಾರ್ ಹಾಗೂ ಗಣ್ಯರು ಉಪಸ್ಥಿತರಿದ್ದರು. ವೈದಿಕರು ಪ್ರಾರ್ಥನೆ ಸಲ್ಲಿಸಿದರು. ಜಗನ್ನಾಥ್ ಕಾಮತ್ ನಿರೂಪಿಸಿದರು.


Discover more from BHAKTHI SANJEEVINI

Subscribe to get the latest posts sent to your email.

Leave a Reply

You May Have Missed

Discover more from BHAKTHI SANJEEVINI

Subscribe now to keep reading and get access to the full archive.

Continue reading