ಅಗಸ್ಟ್.18 ರಿಂದ ಅಗಸ್ಟ್ 25ರವರೆಗೆ ಉಡುಪಿ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ 126ನೇ ಭಜನಾ ಸಪ್ತಾಹ ಮಹೋತ್ಸವ.
ಉಡುಪಿ, ಆ. 15: ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ 126ನೇ ಭಜನ ಸಪ್ತಾಹ ಮಹೋತ್ಸವ ಆ. 18ರಿಂದ 25ರ ತನಕ ಜರಗಲಿದೆ.
ಆ.18 ರ ಮಧ್ಯಾಹ್ನ 12.05ಕ್ಕೆ ದೀಪ ಪ್ರಜ್ವಲನೆ, ದೀಪ ಸ್ಥಾಪನೆಯೊಂದಿಗೆ ಆರಂಭವಾಗಲಿದೆ. ವಿವಿಧ ಭಜನಾ ಮಂಡಳಿಗಳು ಭಜನಾ ಸಂಕೀರ್ತನೆ ಸೇವೆ ಸಲ್ಲಿಸಲಿವೆ. ಪ್ರತಿ ದಿನ ಮಧ್ಯಾಹ್ನ 12.30ಕ್ಕೆ ಶ್ರೀ ದೇವರಿಗೆ ಮಹಾಪೂಜೆ, 1 ಗಂಟೆಗೆ ಶ್ರೀ ವಿಠೋಭ ರುಖುಮಾಯಿ ದೇವರಿಗೆ ಮಹಾಪೂಜೆ ಬಳಿಕ ಪಂಚ ಭಕ್ಷ ಪರಮಾನ್ನ ನೈವೇದ್ಯ ಜರಗಲಿದೆ.
ಆ. 18ರಿಂದ 21 ರ ತನಕ 8.05ಕ್ಕೆ ಪ್ರತಿದಿನ ರಾತ್ರಿ ಪೂಜೆ, ಆ. 23ರ ಏಕಾದಶಿ, ಆ. 24 ರ ಅತಿರಿಕ್ತ ಉಪವಾಸ ದಂದು 9ಕ್ಕೆ ರಾತ್ರಿ ಪೂಜೆ ನಡೆಯಲಿದೆ. ಆ. 22 ರ ರಾತ್ರಿ 9ಕ್ಕೆ ರಂಗಪೂಜೆ, ಆ. 19ರಿಂದ 24ರ ತನಕ ಪ್ರತಿ ದಿನ ಪ್ರಾತಃ ಕಾಲ 5.30ಕ್ಕೆ ಆ. 25ರಂದು ಪ್ರಾತಃ ಕಾಲ 5ಕ್ಕೆ ಕಾಕಡಾರತಿ ಜರಗಲಿದೆ.
ಆ.23ರ ಸಂಜೆ 5ಕ್ಕೆ ನಗರ ಭಜನೆಯು ದೇವಸ್ಥಾನದಿಂದ ಹೊರಟು ಐಡಿಯಲ್ ಸರ್ಕಲ್, ಡಯಾನ ಸರ್ಕಲ್, ಕೋರ್ಟ್ ರಸ್ತೆ, ಅಜ್ಜರಕಾಡು, ಕೆ.ಎಂ. ಮಾರ್ಗ, ಸಂತೆಕಟ್ಟೆ ಶಿರಿಬೀಡು, ಕಲ್ಸಂಕ, ರಥಬೀದಿ, ತೆಂಕಪೇಟೆಯಾಗಿ ಎಲ್ವಿಟಿ ರಸ್ತೆಯಲ್ಲಿ ತಿರುಗಿ ಶ್ರೀ ಭುವನೇಂದ್ರ ಮಂಟಪ ರಸ್ತೆಯಲ್ಲಿ ಮುಂದುವರಿದು ನಾಗಬನ ರಸ್ತೆಯಾಗಿ ಕಡೆಕೊಪ್ಪಲದವರೆಗೆ ಹೋಗಿ ಶ್ರೀ ದೇವಸ್ಥಾನಕ್ಕೆ ಹಿಂದಿರುಗಲಿದೆ.
ಆ. 25ರ ಬೆಳಗ್ಗೆ 11ಕ್ಕೆ ನಗರ ಭಜನೆ ಹೊರಡುವುದು, 11.30ಕ್ಕೆ ಶ್ರೀ ಲಕ್ಷ್ಮೀ ವೆಂಕಟೇಶ ದೇವರಿಗೆ ಮಧ್ಯಾಹ್ನದ ಪೂಜೆ ಬಳಿಕ ಕಾಲು ದೀಪವನ್ನು ವಿಠೋಭ ದೇವರ ವಿಗ್ರಹ ಮುಂದಿರಿಸಿಕೊಂಡು ಹೊರಗೆ ಸುಂದರ ರಾಮ್ ಪೈ ಸ್ಮಾರಕ ಮಂಟಪಕ್ಕೆ ತಂದು ಉರುಳು ಸೇವೆ (ಮಡಸ್ತಾನ), ಮೊಸರು ಕುಡಿಕೆ, ತಪ್ಪಂಗಾಯಿ ಇತ್ಯಾದಿ ಮಂಗಲೋತ್ಸವ ಕಾರ್ಯಕ್ರಮ, ಸಂಜೆ 5.30ರಿಂದ ರಾತ್ರಿ 8ರ ವರೆಗೆ ಸಮಾರಾಧನೆ, ಮರುಭಜನೆ, 9ಕ್ಕೆ ರಾತ್ರಿಪೂಜೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟನೆ ತಿಳಿಸಿದೆ.
Discover more from BHAKTHI SANJEEVINI
Subscribe to get the latest posts sent to your email.



Leave a Reply