ಶ್ರೀಕೃಷ್ಣ ಮಠ ಸಹಿತ ನಾನಾ ಮಠಗಳಲ್ಲಿ ತಪ್ತ ಮುದ್ರಾಧಾರಣೆ..!
ಉಡುಪಿ: ಅಗ್ನಿಯಲ್ಲಿ ಕಾಯಿಸಿದ ಶಂಖ-ಚಕ್ರಮುದ್ರೆಗಳನ್ನು ಭುಜ/ತೋಳು, ಎದೆಯಲ್ಲಿ ಧಾರಣೆ ಮಾಡುವ ಮೂಲಕ ಮಾಧ್ವ ಪರಂಪರೆಯ ಸಂಕೇತವಾದ ತಪ್ತ ಮುದ್ರಾಧಾರಣೆಯು ಉಡುಪಿ ಶ್ರೀಕೃಷ್ಣ ಮಠ ಸಹಿತ ನಾನಾ ಮಠ, ಊರುಗಳಲ್ಲಿ ನಡೆಯಿತು.
ಪರ್ಯಾಯ ಶಿರೂರು ಮಠದ ಶ್ರೀವೇದವರ್ಧನತೀರ್ಥ ಶ್ರೀಪಾದರು ಶ್ರೀಕೃಷ್ಣ ಮಠದಲ್ಲಿ ಭಕ್ತರಿಗೆ ತಪ್ತ ಮುದ್ರಾಧಾರಣೆ ಮಾಡಿಸಿದರು. ಸೋದೆ ಶ್ರೀವಿಶ್ವವಲ್ಲಭತೀರ್ಥರು (ಬೆಂಗಳೂರು), ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಕಾಣಿಯೂರು ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು (ಉಡುಪಿ, ಪಾಜಕ) ತಪ್ತ ಮುದ್ರಾಧಾರಣೆ ಮಾಡಿಸಿದರು.

ಪುತ್ತಿಗೆ ಮಠ ಹಿರಿಯ ಯತಿ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು(ಬೆಂಗಳೂರು), ಕಿರಿಯ ಯತಿ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು (ಹಿರಿಯಡ್ಕದ ಪುತ್ತಿಗೆ ಮೂಲ ಮಠ), ಅದಮಾರು ಮಠದ ಹಿರಿಯ ಯತಿ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು (ಬಳ್ಳಾರಿ ಹಾಗೂ ಅನಂತಪುರ), ಕಿರಿಯ ಯತಿ ಶ್ರೀಈಶಪ್ರಿಯತೀರ್ಥ ಶ್ರೀಪಾದರು (ಮೈಸೂರು), ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು (ಉಡುಪಿ) ಹಾಗೂ ಪಲಿಮಾರು ಮಠದ ಹಿರಿಯ ಯತಿ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು (ಬೆಂಗಳೂರು, ಮೈಸೂರು) ತಪ್ತ ಮುದ್ರಾಧಾರಣೆ ನೆರವೇರಿಸಿದರು.
ಜು. ೨೬ರಿಂದ ಚಾತುರ್ಮಾಸ್ಯ ವ್ರತವು ಶಾಕಾ ವ್ರತದೊಂದಿಗೆ ಆರಂಭವಾಗಲಿದ್ದು ಉಡುಪಿಯ ಅಷ್ಟಮಠದ ಯತಿಗಳು ಜು. ೨೯, ಆ. ೩, ೮ರಿಂದ ವ್ರತಾಚರಣೆಯಲ್ಲಿ ತೊಡಗಲಿದ್ದಾರೆ.

Discover more from BHAKTHI SANJEEVINI
Subscribe to get the latest posts sent to your email.



Leave a Reply